Tuesday, March 27, 2012

ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡು ಸರ್ಕಾರ ತೆಗೆದ ಕ್ಯಾತೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಖಂಡನಾ ಸಭೆ

ಕಾವೇರಿ ನದಿನೀರಿನ ವಿಚಾರವಾಗಿ ತಮಿಳುನಾಡು ಸರ್ಕಾರ ತೆಗೆದಿರುವ ಕ್ಯಾತೆಯನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ೨೭-೦೩-೨೦೧೨ರಂದು ಬೆಂಗಳೂರಿನಲ್ಲಿ ಖಂಡನಾ ಸಭೆಯನ್ನು ನಡೆಸಿದೆವು. ಸಭೆಯಲ್ಲಿ ಮಾಜಿ ನೀರಾವರಿ ಸಚಿವ ಎಚ್.ಕೆ.ಪಾಟೀಲ್, ವೈ.ಎಸ್.ವಿ. ದತ್ತ, ಜಯಮೃತ್ಯುಂಜಯ ಸ್ವಾಮೀಜಿ, ಡಾ. ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿ, ಪಟಾ ಪಟ್ ನಾಗರಾಜ್, ನಟಿ ಪ್ರಿಯಾ ಹಾಸನ್ ಮತ್ತಿತರ ಗಣ್ಯರ ಭಾಗವಹಿಸಿ, ತಮಿಳುನಾಡಿನ ಜಯಲಲಿತಾ ನಿಲುವನ್ನು ಖಂಡಿಸಿದರು.

ಮಾಜಿ ನೀರಾವರಿ ಸಚಿವಾರಾಗಿದ್ದ ಎಚ್.ಕೆ.ಪಾಟೀಲ ಅವರು ಮಾತನಾಡುತ್ತಾ ೨೦೦೭ ರ ಕಾವೇರಿ ನ್ಯಾಯಮಂಡಳಿ ಐತೀರ್ಪಿನಿಂದ ಈಗಾಗಲೆ ರಾಜ್ಯಕ್ಕೆ ಅನ್ಯಾಯವಾಗಿದ್ದು, ತೀರ್ಪಿಗೆ ಗೌರವ ಸಲ್ಲಿಸುವ ಸಲುವಾಗಿ ೧೯೨ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಈಗಾಗಲೆ ಬಿಡಲಾಗಿದೆ. ಜತೆಗೆ ೨೦೦೭-೦೮ ರಿಂದ ೨೦೧೧-೧೨ ರ ವರೆಗೆ ಕ್ರಮವಾಗಿ ೩೫೩.೬೪, ೨೦೯.೪೨, ೨೧೯.೪೯, ಮತ್ತು ೨೨೬.೨೭ ಟಿ.ಎಂ.ಸಿ. ನೀರನ್ನು ಬಿಡಲಾಗಿದೆ. ಇದರಿಂದ ಕನ್ನಡ ಜನತೆಗೆ ನೋವಾಗಿದ್ದರು, ಅನ್ಯಾಯವಾಗಿದ್ದರೂ ಶಾಂತಿಯಿಂದ ಇದ್ದಾರೆ. ಆದರೆ, ರಾಜಕೀಯ ದುರುದ್ದೇಶದಿಂದ ತಮಿಳುನಾಡು ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಈಗ ಮತ್ತೊಂದು ಹೊಸ ಕ್ಯಾತೆ ತೆಗೆದಿದೆ. ಈ ನಿಲುವನ್ನು ಕನ್ನಡಿಗರೆಲ್ಲ ಒಕ್ಕೊರಲಿನಿಂದ ವಿರೋಧಿಸಿ, ಅಗತ್ಯಬಿದ್ದರೆ ಯಾವ ಹೋರಾಟಕ್ಕೂ ಸಿದ್ದರಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಟಿ.ಏ. ನಾರಾಯಣಗೌಡರು ಮಾತನಾಡುತ್ತ ಕಾವೇರಿ ವಿಷಯದಲ್ಲಿ ರಾಜಕೀಯ ಪ್ರೇರಿತ ದಬ್ಬಾಳಿಕೆ ನಡೆಸುತ್ತಿರುವ ತಮಿಳುನಾಡು ರಾಜ್ಯದ ಜನರ ಸಹನೆ ಪರೀಕ್ಷಿಸುತ್ತಿದೆ. ಅದರ ನಿಲುವಿನ ವಿರುದ್ಧ ವೇದಿಕೆ ಸುಪ್ರೀಂ ಕೋರ್ಟ್ ಗೆ ಹೋಗಲೂ ಸಿದ್ಧ. ಅಗತ್ಯಬಿದ್ದಲ್ಲಿ ಈ ಹಿಂದೆ ಮಾಡಿದಂತೆ ರಾಜ್ಯದ ಜತೆಗಿರುವ ತಮಿಳುನಾಡಿನ ಎಲ್ಲ ಸಂಪರ್ಕ ಕಡಿಯಲೂ ಸಿದ್ಧ ಎಂದು ಎಚ್ಚರಿಸಿದರು.

ಈ ಖಂಡನಾ ಸಭೆಯ ವರದಿಗಳನ್ನು ಇಲ್ಲಿ ನೋಡಿ















Monday, March 26, 2012

ಕಾವೇರಿ ನದಿನೀರಿನ ಕರ್ನಾಟಕದ ನ್ಯಾಯಯುತ ಪಾಲಿಗಾಗಿ ಕರವೇಯ ನಿರಂತರ ಹೋರಾಟ

ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳ ನೀರು ಹಂಚಿಕೆ ಕುರಿತ ವಿವಾದಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಪ್ರಮುಖ ಹೋರಾಟಗಳಲ್ಲೊಂದಾದ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರುತು ನಾವು ನಡೆಸಿದ ಹೋರಾಟಗಳ ವಿವರ ಇಂತಿದೆ:
ಕಾವೇರಿ ನೀರು ಹಂಚಿಕೆ ಕುರಿತು ನಾವು ನಡೆಸಿದ ನಿರಂತರ ಚಳವಳಿ
ಹಿಂದೆ ೨೦೦೩ರಲ್ಲಿ ರಾಜ್ಯದ ಎಸ್.ಎಂ.ಕೃಷ್ಣಾ ಮುಂದಾಳ್ತನದ ಕಾಂಗ್ರೆಸ್ ಸರ್ಕಾರ ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ವರದಿಗೆ ಮಣೆಹಾಕಿ, ನಮ್ಮ ನಾಡಿನ ಅಣೆಕಟ್ಟೆಗಳಲ್ಲಿ ನೀರಿನ ತೀವ್ರವಾದ ಕೊರತೆಯಿದ್ದಾಗಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲು ಮುಂದಾಯ್ತು. ಆಗ ಕಾವೇರಿ ಕಣಿವೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾದ ಹೋರಾಟಕ್ಕೆ ಮುಂದಾಯ್ತು. ರಾಜ್ಯಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿ ತೀವ್ರವಾದ ದಬ್ಬಾಳಿಕೆ ನಡೆಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬಂದಿದ್ದ ಮುಖ್ಯಮಂತ್ರಿಗಳ ವಿರುದ್ಧವಾಗಿ ಪೊಲೀಸರ ಅಭೇಧ್ಯ ರಕ್ಷಣಾ ಕೋಟೆಯನ್ನು ಮುರಿದು ಕಪ್ಪುಬಾವುಟ ತೋರಿಸಿ ಪ್ರದರ್ಶನ ನಡೆಸಲಾಯ್ತು.
ಫೆಬ್ರವರಿ ೫, ೨೦೦೭ ಮತ್ತೊಮ್ಮೆ ಕನ್ನಡಿಗರ ಎದೆಯ ಮೇಲೆ ನಾಡಿನ ಜನತೆಯ ಮರಣ ಶಾಸನವನ್ನು ಕಾವೇರಿ ನ್ಯಾಯ ಮಂಡಲಿ ಬರೆಯಲು ಅಡಿಯಿಟ್ಟ ಕರಾಳ ದಿನ. ಯಾವ ವೈಜ್ಞಾನಿಕ ತಳಹದಿಯೂ ಇಲ್ಲದ, ನದಿ ಹಂಚಿಕೆಯ ರಾಷ್ಟ್ರೀಯ ನೀತಿಯೇ ಇರದಿದ್ದರೂ ಕನ್ನಡ ನಾಡಿಗೆ ಹಸಿ ಹಸಿ ಅನ್ಯಾಯ ಮಾಡುವಂತಿದ್ದ ತೀರ್ಪು ಮಧ್ಯಾಹ್ನ ೨.೧೫ಕ್ಕೆ ದೆಹಲಿಯಲ್ಲಿ ಹೊರ ಬಿತ್ತು. ಕೇವಲ ಹದಿನೈದು ನಿಮಿಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ, ನಗರ ಪಟ್ಟಣಗಳ ಬೀದಿಬೀದಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಅನ್ಯಾಯದ ತೀರ್ಪಿನ ವಿರುದ್ಧ ಪ್ರತಿಭಟಿಸಲಾರಂಭಿಸಿದರು. ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದ ಚಳುವಳಿ ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರಾಜ್ಯದಾದ್ಯಂತ ರೈಲು ತಡೆ, ಕರ್ನಾಟಕ ಬಂದ್ ನಂತಹ ಉಗ್ರ ಪ್ರತಿಭಟನೆಗಳಾಗಿ ತಿರುಗಿತು. ಕರ್ನಾಟಕ ಬಂದ್ ಆಚರಣೆ ಸಂದರ್ಭದಲ್ಲಂತೂ ನಮ್ಮ ಕಾರ್ಯಕರ್ತರ ಧೈರ್ಯ ಸಾಹಸಗಳು ಅಸೀಮವಾಗಿದ್ದವು. ನಾಡಿನ ಚಳವಳಿಯ ಇತಿಹಾಸದಲ್ಲೇ ಮೊದಲಬಾರಿ ವಿಮಾನಗಳ ಸಂಚಾರಗಳನ್ನು ತಡೆಯಲಾಯಿತು. ಈ ಸಮಯದಲ್ಲಿ ಬಂದೂಕು ಹಿಡಿದು ಬಂದ ಕೇಂದ್ರದ ರಕ್ಷಣಾ ಪಡೆಗಳನ್ನು ಎದುರಿಸಿ ತಮ್ಮ ಜೀವ ಒತ್ತೆಯಿಟ್ಟು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿಮಾನ ಹಾರಾಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡೆದದ್ದು ಮುಂತಾದ ನಾನಾ ಹಂತದ ಪ್ರತಿಭಟನೆಗೆ ಕಾರಣವಾಯ್ತು. ಕಾವೇರಿ ಐತೀರ್ಪಿನ ನಂತರ ತಲಕಾವೇರಿಯಿಂದ ಬೆಂಗಳೂರಿನ ತನಕ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮಾರ್ಗವಾಗಿ ಬೆಂಗಳೂರಿನವರೆಗೆ ನಡೆಸಿದ ಬೃಹತ್ ಜಾಗೃತಿ ಜಾಥಾ ಜನರಲ್ಲಿ ಕೇಂದ್ರ ಸರ್ಕಾರದ ಈ ತೀರ್ಪಿನ ವಿರುದ್ಧ ಜನಮತ ಮೂಡಿಸಲು ನೆರವಾಯಿತು. ನವದೆಹಲಿಯಲ್ಲಿ ರಾಜ್ಯದ ೨೫,೦೦೦ಕ್ಕೂ ಹೆಚ್ಚಿನ ಜನರ ಅತಿ ದೊಡ್ಡ ಜಾಥಾವನ್ನು ನಡೆಸಲಾಯಿತು. ದೆಹಲಿಯ ಇತಿಹಾಸದಲ್ಲೇ ಇಂತಹ ದೊಡ್ದ ಪ್ರಮಾಣದ ಕನ್ನಡಿಗರ ಪ್ರತಿಭಟನೆ ನಡೆದಿರಲಿಲ್ಲ. ಈ ಎಲ್ಲ ಹೋರಾಟಗಳ ಫಲವಾಗಿಯೇ ಕರ್ನಾಟಕ ರಾಜ್ಯ ಸರ್ಕಾರದ ಅರ್ಜಿಯನ್ನು ಅಂದು ಸರ್ವೋಚ್ಛ ನ್ಯಾಯಾಲಯ ಸ್ವೀಕರಿಸಿತು. ಕೇಂದ್ರಸರ್ಕಾರ ಕನ್ನಡಿಗರ ಹಿತಕ್ಕೆ ಮಾರಕವಾದ ಈ ಐತೀರ್ಪನ್ನು ಇದುವರೆವಿಗೂ ತನ್ನ ಗೆಜೆಟಿಯರ್ನಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ.
ಆದರೆ, ಈಗ ಮತ್ತೊಮ್ಮೆ ತಮಿಳುನಾಡು ಸರ್ಕಾರ ಮತ್ತೊಮ್ಮೆ ಈ ವಿಚಾರದಲ್ಲಿ ತನ್ನ ಕ್ಯಾತೆ ಆರಂಭಿಸಿದ್ದು, ಕನ್ನಡಿಗರನ್ನು ಕೆಣಕುವಂತ ಕೆಲಸಕ್ಕೆ ಮುಂದಾಗಿದೆ. ಮತ್ತೊಮ್ಮೆ ನಾವು ನೀವು ಕಾವೇರಿ ನದಿನೀರಿಗಾಗಿ ಹೋರಾಡುವ ಸಂಭವ ಬಂದಂತಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

Wednesday, March 21, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ: ೫. ಮನರಂಜನಾ ಕ್ಷೇತ್ರದಲ್ಲಿ ಕನ್ನಡ ಸಾರ್ವಭೌಮತ್ವಕ್ಕಾಗಿ ಹೋರಾಟ

ಒಂದು ನಾಡಿನ ಜನಜೀವನದ ಬಹುಮುಖ್ಯ ಅಂಗ ಆ ನಾಡಿನ ಮನರಂಜನಾ ಮಾಧ್ಯಮ ಕ್ಷೇತ್ರ. ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ನಮ್ಮ ನಾಡಿನಲ್ಲಿ ಮನರಂಜನಾ ಕ್ಷೇತ್ರದಲ್ಲೂ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯೂ ನಮ್ಮ ಗುರಿಗಳಲ್ಲೊಂದು. ಕನ್ನಡ ಮನರಂಜನಾ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು ಅನೇಕ. ೨೦೦೪ರ ಸುಮಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯು, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎನ್ನುವ ಕಾರಣದಿಂದಾಗಿ ಪರಭಾಷಾ ಚಿತ್ರಗಳ ಬಿಡುಗಡೆಗಾಗಿ ಒಂದು ನಿಯಮವನ್ನು ರೂಪಿಸಿ ಅದರಂತೆ ನಿಗದಿತ ಪ್ರತಿಗಳಷ್ಟನ್ನು ಮಾತ್ರಾ, ಅದೂ ಮೂಲಚಿತ್ರ ಬಿಡುಗಡೆಯಾದ ಏಳುವಾರದ ಅಂತರದ ನಂತರ ಬಿಡುಗಡೆ ಮಾಡಬೇಕೆಂಬ ನಿಯಮ ಜಾರಿಗೆ ತಂದಿತು. ಈ ನಿಯಮವನ್ನು ಜಾರಿಗೆ ತರುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಚಿತ್ರರಂಗದ ಬೆಂಬಲಕ್ಕೆ ಸಂಪೂರ್ಣವಾಗಿ ಸನ್ನದ್ಧವಾಗಿ ನಿಂತಿತು. ಒಂದು ಹಂತದಲ್ಲಿ ಕನ್ನಡಿಗರ ಈ ಹೋರಾಟ ಉಗ್ರಸ್ವರೂಪ ಪಡೆದುಕೊಂಡಿತು. ಹೋರಾಟದಲ್ಲಿ ಸಹಕರಿಸದೆ ಪರಭಾಷಾ ಚಿತ್ರಗಳನ್ನು ಎಗ್ಗುಸಿಗ್ಗಿಲ್ಲದೆ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳ ವಿರುದ್ಧ ಉಗ್ರವಾಗಿ ಪ್ರತಿಭಟಿಸಲಾಯ್ತು. ಎಂದಿನಂತೆ ವೇದಿಕೆಯ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ, ಲಾಠಿಬೂಟುಗಳ ಸನ್ಮಾನಗಳು ನಡೆದು ಅನೇಕರಿಗೆ ಜೈಲುವಾಸಗಳೂ ಆದವು. ಏನಾದರೇನು? ಈ ಹೋರಾಟದ ಪರಿಣಾಮವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಕನ್ನಡ ಚಿತ್ರ ಪ್ರದರ್ಶನ ಆರಂಭವಾಯಿತು.

ಹಾಗೆಯೇ ನಮ್ಮ ಹೋರಾಟವು ನಿಯಮ ಮುರಿದ ಕರ್ನಾಟಕ ವಾಣಿಜ್ಯ ಮಂಡಲಿಯ ಸದಸ್ಯರ ವಿರುದ್ಧವೂ ನಡೆಯಿತು. ಶಿವಾಜಿ ತಮಿಳು ಚಲನಚಿತ್ರ ನೂರಾರು ಕೇಂದ್ರದಲ್ಲಿ ಬಿಡುಗಡೆಗೊಳ್ಳಲು ಅಣಿಯಾಗಿದ್ದಾಗ ತೀವ್ರ ಪ್ರತಿಭಟನೆಗಳು ನಡೆದು ಬಿಡುಗಡೆಯನ್ನು ಹದಿಮೂರು ಕೇಂದ್ರಗಳಿಗೆ ಸೀಮಿತಗೊಳಿಸಲಾಯಿತು. ಬೆಂಗಳೂರಿನಲ್ಲಿ ಆರಂಭವಾದ ಖಾಸಗಿ ಎಫ್‌ಎಂ ವಾಹಿನಿಗಳು ಸಂಪೂರ್ಣವಾಗಿ ಕನ್ನಡವನ್ನು ಕಡೆಗಣಿಸಿ ಹಿಂದಿ ಹಾಡುಗಳ ಪ್ರಸಾರಕ್ಕೆ ಮುಂದಾದಾಗ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕಿಳಿಯಿತು. ಕನ್ನಡಿಗರ ಎಚ್ಚರಿಕೆ ಮಾತುಗಳಿಗೆ ಮಣಿಯದೇ ತಮ್ಮ ಹಟವನ್ನು ಮುಂದುವರಿಸಿದಾಗ ಅಂತಹ ರೇಡಿಯೋ ಕೇಂದ್ರಗಳ ವಿರುದ್ಧ ಉಗ್ರವಾದ ಪ್ರತಿಭಟನೆಗಳನ್ನು ನಡೆಸಲಾಯಿತು. ಇಂತಹ ರೇಡಿಯೋ ವಾಹಿನಿಗಳ ಕಾರ್ಯಕ್ರಮಗಳನ್ನು ಬೀದಿ ಬೀದಿಗಳಲ್ಲಿ ಪ್ರತಿಭಟಿಸಲಾಯಿತು. ಇಂತಹ ಸಂಘಟಿತ ಹೋರಾಟದ ಫಲವಾಗಿ ಇದೀಗ ಬೆಂಗಳೂರಿನ ಬಹುತೇಕ ಖಾಸಗಿ ಎಫ಼್.ಎಂ ವಾಹಿನಿಗಳಲ್ಲೀಗ ಕನ್ನಡ ರಾರಾಜಿಸುತ್ತಿದೆ. ವಾರವೊಂದರಲ್ಲಿ ಮೂರ್ನಾಲ್ಕು ಗಂಟೆ ಕನ್ನಡ ಪ್ರಸಾರ ಮಾಡುತ್ತಿದ್ದ ವಾಹಿನಿಗಳು, ನಮ್ಮದು ಬಾಲಿವುಡ್ ಹಾಡುಗಳ ಕೇಂದ್ರ ಎನ್ನುತ್ತಿದ್ದ ಕೇಂದ್ರಗಳು ಇದೀಗ ನಮ್ಮದು ೧೦೦% ಕನ್ನಡ ೧೦೧% ಕನ್ನಡ ಅನ್ನುವಂತಾಗಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

Tuesday, March 20, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೪. ಆಡಳಿತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದ ಬಳಕೆಗಾಗಿ ಹೋರಾಟ

ಕನ್ನಡದ ಸಾರ್ವಭೌಮತ್ವ ಇರುವುದು ನಾಡಿನ ಯಾವುದೇ ಭಾಗದಲ್ಲಿರುವ ವ್ಯವಸ್ಥೆಗಳು ನಾಡಿನ ಅತಿ ಸಾಮಾನ್ಯ ಕನ್ನಡಿಗನೊಬ್ಬನಿಗೂ ತೊಡಕಾಗದಂತೆ ಇರುವುದರಲ್ಲಿ. ಕನ್ನಡನಾಡಲ್ಲಿ ಕನ್ನಡಿಗ, ನಾಡಿನ ಎಲ್ಲ ಕಛೇರಿ, ಅಂಗಡಿ, ಮುಂಗಟ್ಟು, ಮಳಿಗೆ, ನ್ಯಾಯಾಲಯ, ವಿಮಾನ-ರೈಲು-ಬಸ್ ನಿಲ್ದಾಣ... ಹೀಗೆ ಎಲ್ಲಿಯೇ ಆದರೂ ತೊಡಕಿಲ್ಲದಂತೆ ತನ್ನ ನುಡಿಯಲ್ಲೇ ವ್ಯವಹರಿಸಲು ಆಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ವಿವಿಧ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಹಾಕಬೇಕೆಂಬ ಸರ್ಕಾರಿ ಆದೇಶವನ್ನು ಉಲ್ಲಂಘನೆಯ ವಿರುದ್ಧ ಹಲವು ಬಾರಿ ಹೋರಾಟಗಳನ್ನು ನಡೆಸಿದೆವು.

ಸಾಂಕೇತಿಕವಾಗಿ ಕನ್ನಡವಿಲ್ಲದ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದೆವು. ಮುಂದುವರೆದು ಕನ್ನಡಿಗರಾಗಿ ನಮಗಿರುವ ಗ್ರಾಹಕ ಹಕ್ಕುಗಳ ಬಗ್ಗೆ ಜನಜಾಗೃತಿಯನ್ನೂ, ಸಂಸ್ಥೆಗಳಿಗೆ, ಉದ್ದಿಮೆಗಳಿಗೆ ಅವರ ಪಾಲಿನ ಕರ್ತವ್ಯವನ್ನೂ ಎಲ್ಲ ರೀತಿಗಳಿಂದ ಮನವರಿಕೆ ಮಾಡಿಕೊಟ್ಟು, ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಪರಭಾಷಿಕರಿಗೆ ಅನುಕೂಲಕರ ಪೂರಕ ವಾತಾವರಣ ಕಲ್ಪಿಸಲು ಶ್ರಮಿಸಿದ್ದೇವೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

Monday, March 12, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೩. ನಾಡಿನ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ

ನಾಡಿನ ರೈತ ಸಮುದಾಯದ ಸಮಸ್ಯೆಗಳಿಗೆ ಸದಾ ಕರ್ನಾಟಕ ರಕ್ಷಣಾ ವೇದಿಕೆಯು ಸ್ಪಂದಿಸುತ್ತಿದ್ದು ರೈತಪರವಾದ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ.
ದುಡಿದ ದುಡಿಮೆಯನ್ನೆಲ್ಲಾ ಕರಗಿಸಿ ಮನೆಗಳನ್ನು ಮುಳುಗಿಸುತ್ತಿದ್ದ, ನಾಡಿನ ರೈತ ಕುಟುಂಬಗಳ ಸಾಲು ಸಾಲು ಸಾವಿಗೆ ಕಾರಣವಾಗಿದ್ದ ಆನ್ ಲೈನ್ ಲಾಟರಿಯು ನಿಷೇಧವಾಗಲು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಉಗ್ರಹೋರಾಟ ಬಹುಪಾಲು ಕಾರಣವೆನ್ನಬಹುದು. ಅಂದು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿ ಆನ್ ಲೈನ್ ಲಾಟರಿ ನಿಷೇಧವಾಗುವಂತೆ ಮಾಡಲಾಯಿತು.
ತೆಂಗು ಬೆಳೆಗೆ ನುಸಿ ಪೀಡೆ ಬಂದು ನಾಡಿನ ರೈತ ತತ್ತರಿಸುತ್ತಿದ್ದಾಗ ತಾತ್ಕಾಲಿಕ ಪರಿಹಾರವಾಗಿ ಕಡೆಪಕ್ಷ ನೀರಾವನ್ನಾದರೂ ಇಳಿಸಿ ಮಾರಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಾಡಿನೆಲ್ಲೆಡೆ ರೈತ ಬಾಂಧವರೊಂದಿಗೆ ಸೇರಿ ನೀರಾ ಚಳವಳಿಯನ್ನು ನಡೆಸಲಾಯಿತು.
ರಸಗೊಬ್ಬರ ಕೊರತೆ, ಕಳಪೆ ಬೀಜದ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನಾದ್ಯಂತ ನಾನಾ ಕಡೆಗಳಲ್ಲಿ ಜಾಥಾಗಳನ್ನೂ, ಪ್ರತಿಭಟನೆಗಳನ್ನೂ ಸಂಘಟಿಸಲಾಯಿತು. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ರೈತ ಮುಂದಾದಾಗ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಆ ಭಾಗದ ಜನತೆ ತತ್ತರಿಸುತ್ತಿದ್ದಾಗ, ಗದಗ ಜಿಲ್ಲೆಯಲ್ಲಿ ನೆರೆಯಿಂದ ಕಂಗಾಲಾಗಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯು ಸ್ಥಳೀಯ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಪರಿಹಾರ ವಿತರಣೆ ಕಾರ್ಯ ಸುಸೂತ್ರವಾಗಿ ನಡೆಯಲು ಕಾರಣವಾಯಿತು.
ನಮ್ಮ ರೈತರ ಅಸ್ತಿತ್ವಕ್ಕೇ ಧಕ್ಕೆ ತರುತ್ತಿದ್ದ, ನೆರೆರಾಜ್ಯಗಳಿಂದ ಆಗುತ್ತಿದ್ದ ಕಳಪೆ ಹಾಲು ಪೂರೈಕೆಯ ವಿರುದ್ಧವಾಗಿ ದಿಟ್ಟ ಹೋರಾಟ ನಡೆಸಲಾಯಿತು. ಬೆಂಗಳೂರಿನಲ್ಲಿ ಹೊಸದಾಗಿ ಬಿ.ಡಿ.ಎ. ಆರಂಭಿಸಲು ಯೋಜಿಸಿದ್ದ ಅರ್ಕಾವತಿ ಬಡಾವಣೆಗಾಗಿ ಸುತ್ತಲಿನ ಹಳ್ಳಿಗಳ ನೂರಾರು ರೈತಾಪಿ ಜನರನ್ನು ಒಕ್ಕಲೆಬ್ಬಿಸುವ, ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಉಗ್ರವಾಗಿ ಪ್ರತಿಭಟಿಸಲಾಯ್ತು.
ಅಂತರರಾಜ್ಯ ನದಿ ಹಂಚಿಕೆಯಾಗಿರಲೀ, ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯವಾಗಿರಲೀ ಮಣ್ಣಿನ ಮಕ್ಕಳ ಹಿತ ಕಾಯಲು ಕರ್ನಾಟಕ ರಕ್ಷಣಾ ವೇದಿಕೆ ಅನೇಕಾನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು, ರಾಜ್ಯ ರೈತಸಂಘದೊಂದಿಗೆ ವಿಷಯಾಧಾರಿತ ಹೋರಾಟಗಳಲ್ಲಿ ಕೈಜೋಡಿಸಿದೆ. ಇಂದಿನ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಮ್ಮ ನಾಡಿನ ರೈತರಿಗೆ ಬೇಕಾಗಿರುವ ಪರಿಣಿತಿ, ತಂತ್ರಜ್ಞಾನ, ಮಾಹಿತಿಗಳ ಬಗ್ಗೆ ತರಬೇತಿ ನೀಡುವ, ಬೆಳೆದ ಬೆಳೆಗೆ ಸೂಕ್ತ ಲಾಭ ಗಳಿಸಲು ಅನುಕೂಲವಾಗುವ, ತಮ್ಮ ಬೆಳೆಗೆ ಮಾರುಕಟ್ಟೆ ಗಳಿಸಿಕೊಳ್ಳುವ, ವಿಸ್ತರಿಸಿಕೊಳ್ಳುವ ಎಲ್ಲಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವ ಯೋಜನೆಗಳನ್ನು ರೂಪಿಸುತ್ತಿದೆ. ನಾಡಿನ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವೆಡೆ ಮುಂದೆಯೂ ಅನೇಕ ಹೋರಾಟಗಳನ್ನು ಮಾಡಲಾಗುವುದು.

Thursday, March 8, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೨. ಅಂತರರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ

ನಮ್ಮ ಕನ್ನಡನಾಡು ಸದಾ ಪ್ರಕೃತಿ ಮಾತೆಯಿಂದ ಹರಸಲ್ಪಟ್ಟ ಸಮೃದ್ಧವಾದ ನದಿ ಹರಿವಿನ ನಾಡು. ಇಲ್ಲಿನ ನೆಲವನ್ನು ಹಸನು ಮಾಡಲೆಂದೆ ಧರೆಗೆ ಒಂದಲ್ಲ ಹತ್ತಾರು ನದಿಗಳು ಹರಿದುಬಂದಿವೆ. ಕನ್ನಡಿಗರ ಪುಣ್ಯಫಲವೆಂಬಂತೆ ಒದಗಿ ಬಂದಿರುವ ಈ ನದಿನೀರನ್ನು ಯೋಗ್ಯವಾಗಿ ಬಳಸಿಕೊಂಡಲ್ಲಿ ನಮ್ಮ ನಾಡಲ್ಲಿ ಚಿನ್ನದ ಬೆಳೆಯನ್ನೇ ಬೆಳೆಯಬಹುದು. ಆದರೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮ ತಟ್ಟೆಯಲ್ಲಿನ ರೊಟ್ಟಿಗೆ ನೆರೆಯ ರಾಜ್ಯಗಳು ಕೈ ಹಾಕಲು ಮುಂದಾಗಿವೆ. ಉತ್ತರದಲ್ಲಿ ಕೃಷ್ಣಾನದಿ ನೀರು ಹಂಚಿಕೆಯಾಗಲೀ, ಆಲಮಟ್ಟಿ ಜಲಾಯಶದ ಎತ್ತರದ ವಿಷಯವೇ ಆಗಲಿ, ಮಹದಾಯಿ ನದಿಯ ಕಳಸ-ಭಂಡೂರಾ ನಾಲೆಯ ಯೋಜನೆಯಾಗಲೀ, ಕಾವೇರಿಯಾಗಲೀ, ಚಿತ್ರಾವತಿ ನದಿಯ ಅಣೆಕಟ್ಟಿನ ನಿರ್ಮಾಣ ಕಾರ್ಯವಾಗಲೀ ನೆರೆಯ ರಾಜ್ಯಗಳು ತಕರಾರು ಮಾಡುತ್ತಲೇ ಬಂದಿವೆ. ಇಲ್ಲಿನವರೆಗೆ ನಮ್ಮ ನಾಡಿನ ಜನಪ್ರತಿನಿಧಿಗಳು ಈ ಬಗ್ಗೆ ಅನುಸರಿಸಿದ ನೀತಿ, ಬಳಸಿದ ರಾಜಕೀಯ ತಂತ್ರಗಳು ಅಷ್ಟೇನೂ ಯಶಸ್ವಿಯಾಗಿಲ್ಲ. ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳು ತಮಗೆ ದೆಹಲಿಯಲ್ಲಿರುವ ಹಿಡಿತವನ್ನು ಉಪಯೋಗಿಸಿಕೊಂಡು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದನ್ನು ನೋಡಿಯೂ ಸುಮ್ಮನಿರುವ ಕನ್ನಡನಾಡಿನ ಜನನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮ ನಾಡಿಗೆ ಇಂಥಾ ದುಸ್ಥಿತಿ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಈ ಎಲ್ಲ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ನಮ್ಮ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ತನ್ನ ದಿಟ್ಟ ಹೋರಾಟಗಳಿಂದ ಮಾಡುತ್ತಲೇ ಬಂದಿದೆ.
ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳ ನೀರು ಹಂಚಿಕೆ ಕುರಿತ ವಿವಾದಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಮುಖ್ಯವಾದ ಕೆಲವು ಹೋರಾಟಗಳ ವಿವರ ಇಂತಿದೆ:
ಕಾವೇರಿ ಐತೀರ್ಪಿನ ವಿರುದ್ಧ ನಡೆಸಿದ ಚಳವಳಿ
ಹಿಂದೆ ೨೦೦೩ರಲ್ಲಿ ರಾಜ್ಯದ ಎಸ್.ಎಂ.ಕೃಷ್ಣಾ ಮುಂದಾಳ್ತನದ ಕಾಂಗ್ರೆಸ್ ಸರ್ಕಾರ ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ವರದಿಗೆ ಮಣೆಹಾಕಿ, ನಮ್ಮ ನಾಡಿನ ಅಣೆಕಟ್ಟೆಗಳಲ್ಲಿ ನೀರಿನ ತೀವ್ರವಾದ ಕೊರತೆಯಿದ್ದಾಗಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲು ಮುಂದಾಯ್ತು. ಆಗ ಕಾವೇರಿ ಕಣಿವೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾದ ಹೋರಾಟಕ್ಕೆ ಮುಂದಾಯ್ತು. ರಾಜ್ಯಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿ ತೀವ್ರವಾದ ದಬ್ಬಾಳಿಕೆ ನಡೆಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬಂದಿದ್ದ ಮುಖ್ಯಮಂತ್ರಿಗಳ ವಿರುದ್ಧವಾಗಿ ಪೊಲೀಸರ ಅಭೇಧ್ಯ ರಕ್ಷಣಾ ಕೋಟೆಯನ್ನು ಮುರಿದು ಕಪ್ಪುಬಾವುಟ ತೋರಿಸಿ ಪ್ರದರ್ಶನ ನಡೆಸಲಾಯ್ತು.
ಫೆಬ್ರವರಿ ೫, ೨೦೦೭ ಮತ್ತೊಮ್ಮೆ ಕನ್ನಡಿಗರ ಎದೆಯ ಮೇಲೆ ನಾಡಿನ ಜನತೆಯ ಮರಣ ಶಾಸನವನ್ನು ಕಾವೇರಿ ನ್ಯಾಯ ಮಂಡಲಿ ಬರೆಯಲು ಅಡಿಯಿಟ್ಟ ಕರಾಳ ದಿನ. ಯಾವ ವೈಜ್ಞಾನಿಕ ತಳಹದಿಯೂ ಇಲ್ಲದ, ನದಿ ಹಂಚಿಕೆಯ ರಾಷ್ಟ್ರೀಯ ನೀತಿಯೇ ಇರದಿದ್ದರೂ ಕನ್ನಡ ನಾಡಿಗೆ ಹಸಿ ಹಸಿ ಅನ್ಯಾಯ ಮಾಡುವಂತಿದ್ದ ತೀರ್ಪು ಮಧ್ಯಾಹ್ನ ೨.೧೫ಕ್ಕೆ ದೆಹಲಿಯಲ್ಲಿ ಹೊರ ಬಿತ್ತು. ಕೇವಲ ಹದಿನೈದು ನಿಮಿಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ, ನಗರ ಪಟ್ಟಣಗಳ ಬೀದಿಬೀದಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಅನ್ಯಾಯದ ತೀರ್ಪಿನ ವಿರುದ್ಧ ಪ್ರತಿಭಟಿಸಲಾರಂಭಿಸಿದರು. ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದ ಚಳುವಳಿ ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರಾಜ್ಯದಾದ್ಯಂತ ರೈಲು ತಡೆ, ಕರ್ನಾಟಕ ಬಂದ್ ನಂತಹ ಉಗ್ರ ಪ್ರತಿಭಟನೆಗಳಾಗಿ ತಿರುಗಿತು. ಕರ್ನಾಟಕ ಬಂದ್ ಆಚರಣೆ ಸಂದರ್ಭದಲ್ಲಂತೂ ನಮ್ಮ ಕಾರ್ಯಕರ್ತರ ಧೈರ್ಯ ಸಾಹಸಗಳು ಅಸೀಮವಾಗಿದ್ದವು. ನಾಡಿನ ಚಳವಳಿಯ ಇತಿಹಾಸದಲ್ಲೇ ಮೊದಲಬಾರಿ ವಿಮಾನಗಳ ಸಂಚಾರಗಳನ್ನು ತಡೆಯಲಾಯಿತು. ಈ ಸಮಯದಲ್ಲಿ ಬಂದೂಕು ಹಿಡಿದು ಬಂದ ಕೇಂದ್ರದ ರಕ್ಷಣಾ ಪಡೆಗಳನ್ನು ಎದುರಿಸಿ ತಮ್ಮ ಜೀವ ಒತ್ತೆಯಿಟ್ಟು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿಮಾನ ಹಾರಾಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡೆದದ್ದು ಮುಂತಾದ ನಾನಾ ಹಂತದ ಪ್ರತಿಭಟನೆಗೆ ಕಾರಣವಾಯ್ತು. ಕಾವೇರಿ ಐತೀರ್ಪಿನ ನಂತರ ತಲಕಾವೇರಿಯಿಂದ ಬೆಂಗಳೂರಿನ ತನಕ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮಾರ್ಗವಾಗಿ ಬೆಂಗಳೂರಿನವರೆಗೆ ನಡೆಸಿದ ಬೃಹತ್ ಜಾಗೃತಿ ಜಾಥಾ ಜನರಲ್ಲಿ ಕೇಂದ್ರ ಸರ್ಕಾರದ ಈ ತೀರ್ಪಿನ ವಿರುದ್ಧ ಜನಮತ ಮೂಡಿಸಲು ನೆರವಾಯಿತು. ನವದೆಹಲಿಯಲ್ಲಿ ರಾಜ್ಯದ ೨೫,೦೦೦ಕ್ಕೂ ಹೆಚ್ಚಿನ ಜನರ ಅತಿ ದೊಡ್ಡ ಜಾಥಾವನ್ನು ನಡೆಸಲಾಯಿತು. ದೆಹಲಿಯ ಇತಿಹಾಸದಲ್ಲೇ ಇಂತಹ ದೊಡ್ದ ಪ್ರಮಾಣದ ಕನ್ನಡಿಗರ ಪ್ರತಿಭಟನೆ ನಡೆದಿರಲಿಲ್ಲ. ಈ ಎಲ್ಲ ಹೋರಾಟಗಳ ಫಲವಾಗಿಯೇ ಕರ್ನಾಟಕ ರಾಜ್ಯ ಸರ್ಕಾರದ ಅರ್ಜಿಯನ್ನು ಅಂದು ಸರ್ವೋಚ್ಛ ನ್ಯಾಯಾಲಯ ಸ್ವೀಕರಿಸಿತು. ಕೇಂದ್ರಸರ್ಕಾರ ಕನ್ನಡಿಗರ ಹಿತಕ್ಕೆ ಮಾರಕವಾದ ಈ ಐತೀರ್ಪನ್ನು ಇದುವರೆವಿಗೂ ತನ್ನ ಗೆಜೆಟಿಯರ್ನಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ.

ಚಿತ್ರಾವತಿ ಆಣೆಕಟ್ಟು ನಿರ್ಮಾಣಕ್ಕೆ ತೊಡಕಾಗಿದ್ದ ಆಂಧ್ರದ ವಿರುದ್ಧ ನಡೆಸಿದ ಹೋರಾಟ

ಕೋಲಾರ ಜಿಲ್ಲೆಯ ಗಡಿ ಪ್ರದೇಶವಾದ ಪೆರಗೋಡಿನ ಕುಡಿಯುವ ನೀರಿನ ಯೋಜನೆಯಾದ ಚಿತ್ರಾವತಿ ಅಣೆಕಟ್ಟೆ ನಿರ್ಮಾಣಕ್ಕೆ ನೆರೆಯ ಆಂಧ್ರ ತೊಡಕುಂಟು ಮಾಡಿದಾಗ ಬೆಂಗಳೂರಿನಿಂದ ಪಾದಯಾತ್ರೆ ನಡೆಸಿ ಭಾಗ್ಯನಗರಿ(ಬಾಗೇಪಲ್ಲಿ)ಯಲ್ಲಿ ದೊಡ್ಡ ಜಾಥಾ ನಡೆಸಿ ಅಣೆಕಟ್ಟೆ ನಿರ್ಮಾಣಕ್ಕೆ ಕರಸೇವೆ ಮಾಡಲಾಯಿತು. ಪೆರಿಟಾಲ ರವಿ ಎನ್ನುವ ಆಂಧ್ರದ ಗೂಂಡಾ ರಾಜಕಾರಣಿಯ ಬಾಂಬ್ ಬೆದರಿಕೆಗೆ, ಕೊಲೆ ಬೆದರಿಕೆಗೆ ಬಗ್ಗದೆ ಚಿತ್ರಾವತಿ ಅಣೆಕಟ್ಟೆಗೆ ಕರಸೇವೆ ನಡೆಸಲಾಯಿತು. ಇದೀಗ ಆ ಭಾಗದ ಜನತೆಯ ಕುಡಿವ ನೀರಿನ ಬವಣೆ ತಕ್ಕಮಟ್ಟಿಗೆ ಪರಿಹಾರವಾಗಿದೆ

ಮಹದಾಯಿ ನದಿಯ ಕಳಸ-ಭಂಡೂರಾ ಯೋಜನೆಗೆ ಅಡ್ಡಿಪಡಿಸಿದ ಗೋವಾದ ವಿರುದ್ಧ ಹೋರಾಟ

ಹುಬ್ಬಳ್ಳಿ, ಧಾರವಾಡ, ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಅತ್ಯಂತ ಅಗತ್ಯವಾಗಿರುವ ಕಳಸ - ಭಂಡೂರ ಯೋಜನೆ ನಾನಾ ಕಾರಣಗಳಿಂದ ವಿಳಂಬವಾಗುತ್ತಿರುವುದಷ್ಟೇ ಅಲ್ಲದೆ ಮತ ಬ್ಯಾಂಕಿನ ರಾಜಕಾರಣಕ್ಕೆ, ನೆರೆ ರಾಜ್ಯಗಳ ಕುಟಿಲತೆಗೆ ಬಲಿಯಾಗುವ ಭೀತಿ ಎದುರಿಸುತ್ತಿದೆ. ನಮ್ಮ ನಾಡಿನ ಖಾನಾಪುರದಲ್ಲಿ ಹುಟ್ಟುವ ಮಹದಾಯಿ ನದಿಯಲ್ಲಿ ಕರ್ನಾಟಕದ ಪಾಲಿನ ೪೫ ಟಿ‌ಎಂಸಿ ನೀರಿನ ಬಳಕೆಯ ಹಕ್ಕನ್ನು ಬಳಸಿ ಕಳಸ ಭಂಡೂರ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ರೀತ್ಯ ೭.೫೬ ಟಿ‌ಎಂಸಿಯಷ್ಟು ನೀರನ್ನು ಮಲಪ್ರಭಾ ನದಿಗೆ ಸೇರಿಸಲಾಗುತ್ತದೆ. ಈ ಮೂಲಕ ಈಗಾಗಲೆ ಸೊರಗಿರುವ ಮಲಪ್ರಭಾ ನದಿಗೆ ಮತ್ತೆ ಚೈತನ್ಯ ತುಂಬಲಿದ್ದು ಹುಬ್ಬಳ್ಳಿ, ಧಾರವಾಡ ಮೊದಲಾದ ನಗರಗಳಲ್ಲಿ ಬಿಗಡಾಯಿಸಿರುವ ಕುಡಿವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ನಮ್ಮ ಪಾಲಿಗೆ ಜೀವದಾಯಿನಿಯಾದ ಈ ಯೋಜನೆಗೆ ಮೊದಲು ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ನಂತರ ವಾಪಸ್ ಪಡೆದು ದ್ರೋಹ ಮಾಡಿದೆ. ನೆರೆಯ ಗೋವಾ ರಾಜ್ಯವು ಈ ವಿಷಯದಲ್ಲಿ ತಕರಾರು ಎತ್ತಿ ಯೋಜನೆಗೆ ಅಡ್ಡಿ ಮಾಡುತ್ತಿದೆ. ಗಡಿ ವಿಷಯದಲ್ಲಿ ಸೋತಿರುವ ಮಹಾರಾಷ್ಟ್ರ ರಾಜ್ಯವು, ಈ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಿ ಗೋವಾದ ಬೆಂಬಲಕ್ಕೆ ನಿಂತಿದೆ. ಗೋವಾ ರಾಜ್ಯದ ಜೀವನದಿಯಾದ ಮಹದಾಯಿ(ಮಾಂಡೋವಿ) ಬತ್ತಿಹೋಗುತ್ತದೆ, ಅರಣ್ಯ ಸಂಪತ್ತು, ಜೀವ ಸಂಕುಲ ನಾಶವಾಗುತ್ತದೆ, ಕರ್ನಾಟಕ ರಾಜ್ಯವು ಕುಡಿಯುವ ನೀರಿನ ನೆಪದಲ್ಲಿ ನೀರಾವರಿ ಯೋಜನೆ ಮಾಡುತ್ತಿದೆ ಎಂದು ಸುಳ್ಳು ಆಪಾದನೆ ಮಾಡುತ್ತಾ ಪರಿಸರವಾದದ ಮುಖವಾಡ ತೊಟ್ಟು, ಜನಾಂದೋಲನಗಳನ್ನು ಹುಟ್ಟು ಹಾಕಿ, ನೆರೆಯ ಗೋವಾದ ಜನರನ್ನು ಕನ್ನಡಿಗರ ವಿರುದ್ಧ ತಪ್ಪು ಮಾಹಿತಿ ನೀಡಿ ಎತ್ತಿ ಕಟ್ಟುತ್ತಾ, ನಮ್ಮ ಹಕ್ಕನ್ನು ನಿರಾಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಮರ ಹೂಡಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು, ಜೂನ್ ೨೨ ೨೦೦೭ ರಂದು ಹುಬ್ಬಳ್ಳಿ ಜನರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜಾಗೃತ ಜಾಥವನ್ನು ಹಮ್ಮಿಕೊಂಡಿತ್ತು. ಹುಬ್ಬಳ್ಳಿ ಮತ್ತು ಧಾರವಾಡದ ಜೊತೆಗೆ ತಮ್ಮ ಹೋರಾಟದ ನಿಲುವನ್ನು ತೋರಲು, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಂದ ಜನ ಸಾಗರ ಹರಿದು ಬಂದಿತ್ತು. ಮಧ್ಯಾಹ್ನ ೩ ಘಂಟೆಗೆ, ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ೫೦೦೦ ಸಾವಿರ ಜನರನ್ನೊಳೊಗಂಡ ಜಾಥಕ್ಕೆ ಚಾಲನೆ ಸಿಕ್ಕಿತು. ಈ ಜಾಥವು ಮಳೆಯಲ್ಲಿಯೂ ಸಹ ಕಳಸ ಬಂಡೂರಿ ನಾಲೆಯ ಪರ ಘೋಷಣೆ ಕೂಗುತ್ತ ಹೋರಾಟ ನಡೆಸಲಾಯಿತು.

ಕೃಷ್ಣಾ ನದಿ ನಿರು ಹಂಚಿಕೆ ವಿಷಯವಾಗಿ ನಡೆಸಿದ ಹೋರಾಟಗಳು

ಕೃಷ್ಣಾ ನದಿಗೆ ಕಟ್ಟಲಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ಹೆಚ್ಚಿಸುವ ಸಲುವಾಗಿ ಬಾಗಲಕೋಟೆಯಲ್ಲಿ ದೊಡ್ಡ ಜಾಥಾ ನಡೆಸಿ ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ನಮಗಗಿದ್ದ ಅನ್ಯಾಯದ ವಿರುದ್ಧ ದನಿಯೆತ್ತುವ ಕೆಲವನ್ನು ಕರವೇ ಮಾಡಿತ್ತು. ಕೊನೆಗೆ ಕೃಷ್ಣಾ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಾಗ ಹಲವು ವಿಷಯಗಳಲ್ಲಿ ತೀರ್ಪು ನಮ್ಮ ಪರವಾಗಿದ್ದರೂ, ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕದಂತಾಯಿತು. ರಾಜ್ಯಕ್ಕೆ ದಕ್ಕಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ನೀರೂ ಆಂಧ್ರಪ್ರದೇಶದ ಪಾಲಾಯಿತು. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ನಮ್ಮ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು, ನಮಗೆ ಸಿಕ್ಕಿರುವುದು ಸಾಕು ಅನ್ನುವ ಧೋರಣೆ ಹೊಂದಿದ್ದರು. ರಾಜ್ಯ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿದ ನಮ್ಮ ವೇದಿಕೆ, ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಜನರಲ್ಲಿ ಜಾಗೃತಿ ನಡೆಸಿತು. ಹಲವು ಹೋರಾಟದ ವೇದಿಕೆಗಳಲ್ಲಿ ಇದನ್ನು ಪ್ರಸ್ತಾಪಿಸಿ ನ್ಯಾಯ ಪಡೆಯಲು ಇನ್ನೂ ಹೋರಾಡುತಿದ್ದೇವೆ.
ಹೀಗೆ ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿನ ನೀರಾವರಿ ಸಮಸ್ಯೆಯಾಗಲೀ ಇಡೀ ನಾಡಿನ ಕನ್ನಡಿಗರು ಒಂದಾಗಿ ಅದಕ್ಕೆ ಸ್ಪಂದಿಸುವಂತೆ ನಾಡಿನ ಕನ್ನಡಿಗರಲ್ಲಿ ಹಿಂದೆಂದೂ ಕಾಣದ ಒಗ್ಗಟ್ಟಿನ ಮಹಾಶಕ್ತಿಯ ಉದಯವಾಗಲು ಕರ್ನಾಟಕ ರಕ್ಷಣಾ ವೇದಿಕೆ ಕಾರಣವಾಯಿತು. ಕರ್ನಾಟಕದಲ್ಲಿ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಇದರಿಂದ ನಾಡಿನ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲಾ, ಹಾಗು ನಮ್ಮ ಸರ್ಕಾರವು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಿರುವ ಹಣ ಬಹಳ ಕಡೆಮೆಯಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ನಾಡಿಗೆ ಬರಬೇಕಾಗಿರುವ ಸವಲತ್ತುಗಳನ್ನು ದೊರಕಿಸಿಕೊಡಲು ನಮ್ಮ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲಾ. ಇವೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ ಹಾಗೂ ಈ ಎಲ್ಲಾ ವಿಷಯಗಳಲ್ಲಿ ನ್ಯಾಯ ದೊರಕುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ.
ಮುಂದಿನ ದಿನಗಳಲ್ಲಿ ನದಿ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಎಲ್ಲ ಅನ್ಯಾಯಗಳ ವಿರುದ್ಧ ನಮ್ಮ ದನಿಯೆತ್ತಿ ಇನ್ನೂ ಹೆಚ್ಚಿನ ಹೋರಾಟಗಳನ್ನು ನಿರಂತರವಾಗಿ ಮುಂದುವರೆಸಲಾಗುವುದು.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

Wednesday, March 7, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೧. ಕನ್ನಡಿಗರ ಉದ್ದಿಮೆಗಳ ಉಳಿವು ಮತ್ತು ಉದ್ಯೋಗಕ್ಕಾಗಿ ಹೋರಾಟ

ಕರ್ನಾಟಕ ರಕ್ಷಣಾ ವೇದಿಕೆಯು ಶುರುವಾಗಿ ಸುಮಾರು ಹನ್ನೊಂದು ವರ್ಷಗಳಾದವು. ಈ ಹನ್ನೊಂದು ವರ್ಷಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ನಡೆದು ಬಂದ ದಾರಿ ಬಲು ರೋಚಕ. ಇಂದು ನಾಡಿನ ಅತ್ಯಂತ ಬಲಿಷ್ಠ ಕನ್ನಡಪರ ಸಂಘಟನೆಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಇಂದಿನ ಈ ಸ್ಥಿತಿಯನ್ನು ತಲುಪಲು ಬಹುಪಾಲು ಕಾರಣ ನಾಡಿನ ಎಲ್ಲೆಡೆಯಿಂದ ದೊರೆತ ಜನಬೆಂಬಲ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುತ್ತಾ ನಾಡಿನ ಉದ್ದಗಲಕ್ಕೂ ಹಳದಿ ಕೆಂಪು ಬಾವುಟದಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕಗಳ ರಕ್ಷಣೆ ಮತ್ತು ಏಳಿಗೆಯ ಹೊಣೆ ಹೊತ್ತು ಈ ಪಯಣ ಸಾಗಿದೆ. ಅದಮ್ಯ ಕನ್ನಡಪ್ರೇಮದಿಂದ ನಾವು ಈವರೆಗೂ ನಡೆಸಿರುವ ಸಮಗ್ರ ಹೋರಾಟಗಳ ಚಿತ್ರಣವನ್ನು ನಿಮ್ಮೊಡನೆ ಹಂಚಿಕೊಳ್ಳಲು ಮುಂದಾಗಿದ್ದೇವೆ.
ಕನ್ನಡಿಗರ ಉದ್ದಿಮೆಗಳ ಉಳಿವು ಮತ್ತು ಉದ್ಯೋಗಕ್ಕಾಗಿ ಹೋರಾಟ
ಕನ್ನಡಿಗರ ಮತ್ತು ಕನ್ನಡ ನಾಡಿನ ಏಳಿಗೆಯನ್ನೇ ಪರಮಗುರಿಯನ್ನಾಗಿಸಿ ನೋಡಿದಾಗ ನಾಡಿನ ಉದ್ದಿಮೆಗಳು ಮತ್ತು ಉದ್ಯೋಗಾವಕಾಶಗಳಿಗೆ ಇರುವ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ನಾಡಿನ ಆರ್ಥಿಕತೆ ಮತ್ತು ನಮ್ಮ ಜನರ ಅನ್ನದ ಪ್ರಶ್ನೆ ಬಗೆಹರಿದಾಗಲೇ ಏಳಿಗೆ ಕಾಣುವುದು ಸಾಧ್ಯ ಎಂದೂ ಅರಿವಾಗುತ್ತದೆ. ಹಾಗಾದರೆ ನಮ್ಮೆಲ್ಲರ ಏಳಿಗೆಯ ಮೂಲ ಅಡಗಿರುವುದೇ ಉತ್ಪಾದನಾ ಚಟುವಟಿಕೆಗಳು, ಆರ್ಥಿಕ ಚಟುವಟಿಕೆಗಳು ಹೆಚ್ಚಿದಾಗಲೇ ಅಲ್ಲವೆ? ನಮ್ಮ ಜನರಿಗೆ ಕೈತುಂಬ ಕೆಲಸ ದೊರೆಯದ ಹೊರತು ನಮ್ಮ ಕಣ್ಣಿಗೆಂತು ನಿದ್ದೆ? ಒಂದು ನಾಡಿನಲ್ಲಿ ಕಟ್ಟಿಕೊಳ್ಳುವ ಪ್ರತಿಯೊಂದು ಸವಲತ್ತು, ಸೌಕರ್ಯ, ಉದ್ದಿಮೆಗಳು ಇರುವುದೇ ಆ ನಾಡಿನ ಉದ್ಧಾರಕ್ಕಾಗಿ ಅನ್ನುವ ಸಹಜ ಸತ್ಯ ನಮ್ಮ ಮುಂದಿದ್ದಾಗ ನಮ್ಮ ಗುರಿ ಸ್ಪಷ್ಟತೆ ಪಡೆಯುತ್ತದೆ. ನಮ್ಮ ಜನರಿಗೆ ಕೆಲಸ ಕೊಡಲು ಸಾಧ್ಯವಿಲ್ಲವೆನ್ನುವ ಉದ್ದಿಮೆಗಳ ಅಗತ್ಯ ನಮ್ಮ ನಾಡಿಗೆ ಇಲ್ಲವೇ ಇಲ್ಲ ಎಂದೂ ಸ್ಪಷ್ಟವಾಗುತ್ತದೆ. ಆ ಕಾರಣದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಉದ್ದಿಮೆಗಳ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದು ಅವನ್ನು ಹೆಚ್ಚಿಸಲು ಮತ್ತು ಆ ವಿಷಯದಲ್ಲಿ ಒದಗುವ ಕುತ್ತನ್ನು ನಿವಾರಿಸಲು ಸದಾ ಶ್ರಮಿಸುತ್ತಿದೆ.

ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕನ್ನಡಿಗರ ಉದ್ದಿಮೆಗಳು ಮತ್ತು ಉದ್ಯೋಗಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಮುಖ್ಯವಾದ ಕೆಲವು ಹೋರಾಟಗಳ ವಿವರ ಇಂತಿದೆ:

ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವುದರಿಂದ ನಮ್ಮ ನಾಡಿನ ಸ್ಥಳೀಯರಿಗೆ ಕೆಲಸಗಳು ದೊರಕುವಂತೆ ಆಗುತ್ತದೆ, ಈ ಮೂಲಕ ಕನ್ನಡಿಗರ ಬಾಳು ಹಸನಾಗುವಂತೆ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ನಾವು ಈವರೆಗೂ ಅನೇಕ ಬಾರಿ ಈ ವಿಷಯವಾಗಿ ಜನ ಜಾಗೃತಿ ಮೂಡಿಸುತ್ತಾ, ಸರೋಜಿನಿ ಮಹಿಷಿ ವರದಿಯ ಜಾರಿಗೆ ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ.

ಹುಬ್ಬಳ್ಳಿಯಲ್ಲಿ ಕೇಂದ್ರಕಛೇರಿ ಹೊಂದಿರುವ ನೈಋತ್ಯ ರೇಲ್ವೇ ವಲಯದ ಡಿ ದರ್ಜೆ ಕೆಲಸಗಳಿಗೆ ನೇಮಕಾತಿ ಮಾಡುವ ಸಮಯದಲ್ಲಿ ಅರ್ಜಿ ತುಂಬುವಾಗಲೇ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ತುಂಬಬೇಕೆಂಬ ನಿಬಂಧನೆ ಹಾಕಿ ಆ ಮೂಲಕ ಹಿಂದಿಭಾಷಿಕರಿಗೆ ಸಲ್ಲದ ಅವಕಾಶ ಮಾಡಿಕೊಟ್ಟ ಕ್ರಮದ ವಿರುದ್ಧ ತೀವ್ರವಾಗಿ ಹೋರಾಟ ಮಾಡಲಾಯಿತು. ಪರೀಕ್ಷಾ. ರೇಲ್ವೆ ಕಛೇರಿಗಳ ಮುಂದೆ ನಮ್ಮ ಹಕ್ಕೊತ್ತಾಯ ಮಂಡಿಸಿ ಧರಣಿ ಮಾಡಲಾಯಿತು. ನಮ್ಮ ಹೋರಾಟಕ್ಕೆ ಮಣಿದ ನೈಋತ್ಯ ರೇಲ್ವೇ ಇಲಾಖೆ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತಡೆಹಿಡಿಯಿತು. ಇದಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಕರವೇ ಹೋರಾಟದಿಂದ ಪ್ರಭಾವಿತರಾದ ರಾಜಕೀಯ ಪಕ್ಷಗಳು ನೇಮಕಾತಿಯಲ್ಲಿ ಆಗುತ್ತಿರುವ ತೊಂದರೆ ಹಾಗೂ ತಾರತಮ್ಯದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿದವು. ಇದರ ಫಲವಾಗಿ ಇಂದು ಕೇಂದ್ರ ಸರ್ಕಾರ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಮಹತ್ತರವಾದ ಬದಲಾವಣೆಗಳನ್ನು ತಂದಿದೆ. ಈಗ ಆಯಾ ರಾಜ್ಯದ ಅಭ್ಯರ್ಥಿಗೆ ತನ್ನದೇ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಹಾಗೂ ಎಲ್ಲಾ ಕಡೆಯಲ್ಲೂ ಒಂದೇ ಬಾರಿಗೆ ನೇಮಕಾತಿ ನಡೆಯುವುದರಿಂದ ಹೊರರಾಜ್ಯದ ಜನರು ಇಲ್ಲಿ ಪರೀಕ್ಷೆ ಬರೆಯುವುದ ಕಷ್ಟಸಾಧ್ಯ ಆಗಿರುವುದರಿಂದ ನಮ್ಮ ಜನರಿಗೆ ಹೆಚ್ಚಿನ ಉದ್ಯೋಗಗಳು ದೊರಕುವಲ್ಲಿ ಸಹಾಯಕವಾಗಿವೆ. ಇಂತಹ ಮಹತ್ತರವಾದ ಬದಲಾವಣೆಗೆ ನಮ್ಮ ಹೋರಾಟ ನಾಂದಿ ಹಾಡಿತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ತಮ್ಮ ಬೆಲೆಬಾಳುವ ಜಮೀನನ್ನು ಕಳೆದುಕೊಂಡ ಜನರಿಗೆ ಮತ್ತು ಸಂಸ್ಥೆಯ ಎಲ್ಲ ವಿಭಾಗಗಳಲ್ಲಿನ ಸಿಂಹಪಾಲು ಉದ್ಯೋಗಾವಕಾಶಗಳನ್ನು ಕನ್ನಡಿಗರಿಗೇ ದೊರಕಿಸಿಕೊಡುವಂತೆ ಹೋರಾಟ ಮಾಡಲಾಯಿತು. ಕನ್ನಡಿಗರನ್ನು ಕಡೆಗಣಿಸಿದ್ದ ಈ ಸಂಸ್ಥೆಯ ವಿರುದ್ಧ ಹಲವು ಬಾರಿ ಪ್ರತಿಭಟನೆಗಳನ್ನು ಹಾಗೂ ಪಾದಯಾತ್ರೆಯನ್ನು ಮಾಡಿ ಜನರ ಹಾಗೂ ಸರ್ಕಾರದ ಗಮನವನ್ನು ಈ ಅನ್ಯಾಯದ ವಿರುದ್ಧ ಸೆಳೆಯುವಲ್ಲಿ ಸಫಲವಾಯಿತು. ಇದರ ಪರಿಣಾಮವಾಗಿ ಇಂದು ಇಲ್ಲಿ ಅತಿ ಹೆಚ್ಚು ಪಾಲು ಉದ್ಯೋಗಗಳು ಕನ್ನಡಿಗರಿಗೆ ದೊರಕಿವೆ.

ಹೆಚ್.ಎ.ಎಲ್ . ಬೆಂಗಳೂರು ವಿಭಾಗದ ಹಲವಾರು ಘಟಕಗಳಿಗೆ ಹೊಸದಾಗಿ ನೇಮಕಾತಿ ನಡೆಸಲು ಮುಂದಾಗಿದ್ದ ಹೆಚ್.ಎ.ಎಲ್, ಸುಮಾರು ೬೭೭ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆ ನೀಡಿತ್ತು. ಕರೆದಿರುವ ಬಹುತೇಕ ಎಲ್ಲ ಹುದ್ದೆಗಳಿಗೂ ಡಿಪ್ಲಮೋ ಅಥವಾ ಐ.ಟಿ.ಐ. ಪಾಸಾಗಿರುವ ಅಭ್ಯರ್ಥಿಗಳೇ ಬೇಕಾಗಿದ್ದು, ಆ ಎಲ್ಲ ತರಹದ ಹುದ್ದೆಗಳಿಗೂ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಸ್ಥಳೀಯರಿಗೇ ಆದ್ಯತೆ ನೀಡಬೇಕಿತ್ತು ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದ "ಉದ್ಯೋಗ ವಿನಿಮಯ ಕೇಂದ್ರದಲ್ಲಿ" ನೊಂದಾಯಿಸಿರುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದೆಂದು ನಿಯಮ ಮಾಡಬೇಕಿತ್ತು. ಆದರೆ ಇದಾವುದನ್ನೂ ಮಾಡದೇ ಈ ಹುದ್ದೆಗಳಿಗೆ ಹೊರ ರಾಜ್ಯದ ಅಭ್ಯರ್ಥಿಗಳನ್ನು ತುಂಬುವ ಕೆಲಸಕ್ಕೆ ಮುಂದಾಗಿದ್ದ ಹೆಚ್.ಎ.ಎಲ್. ಸಂಸ್ಥೆಯ ವಿರುದ್ಧ ಪ್ರತಿಭಟಿಸಿ, ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಲಾಯಿತು. ಕಡೆಗೆ ತಮ್ಮ ತಪ್ಪು ಅರಿತುಕೊಂಡ ಸಂಸ್ಥೆ ಕನ್ನಡಿಗರಿಗೆ ಉದ್ಯೋಗವನ್ನು ನೀಡುವ ಭರವಸೆಯನ್ನು ನೀಡಿತು.

ಹಾಗೆಯೇ, ಬೆಂಗಳೂರಿನ ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಎಲ್ಲೆಡೆ ಕನ್ನಡಿಗರಿಗೆ ಕೆಲಸ ನೀಡಬೇಕೆಂದು ಒತ್ತಾಯಿಸಿ ಅನೇಕ ಧರಣಿ ಮಾಡಲಾಗಿದೆ. ಕ್ಯಾಂಟೀನ್, ಭದ್ರತಾ ಪಡೆ, ವಾಹನಗಳು ಇತ್ಯಾದಿ ಪೂರಕ ಉದ್ದಿಮೆಗಳಲ್ಲೂ ಕನ್ನಡೇತರರನ್ನು ತಂದು ತುಂಬುವುದನ್ನು ವಿರೋಧಿಸಿ, ಕನ್ನಡಿಗರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಯಿತು.

ಇದರ ಜೊತೆಯಲ್ಲೇ ಕನ್ನಡಿಗ ಉದ್ಯಮಿಗಳಿಗೆ ಅನವಶ್ಯಕ ಕಿರುಕುಳವನ್ನು ನೀಡಿದನ್ನು ಪ್ರತಿಭಟಿಸಿ ಉದ್ಯಮಿಗಳ ಪರವಾಗಿ ಬೆಂಗಳೂರಿನಲ್ಲಿ ಭಾರಿ ಜಾಥಾವನ್ನು ನಡೆಸಲಾಗಿತ್ತು. ನಾಡಿನ ಕುಲಕಸುಬುಗಳಾದ ನೇಕಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಅಕ್ಕಸಾಲಿಕೆ ಮೊದಲಾದವುಗಳನ್ನು ಉಳಿಸಿಕೊಳ್ಳಲು, ಅವಕ್ಕೆ ಅಗತ್ಯ ಬೆಂಬಲ ದೊರಕಿಸಿಕೊಳ್ಳಲು ಶ್ರಮಿಸಲಾಗುತ್ತಿದೆ.

ಇಷ್ಟೇ ಅಲ್ಲದೆ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿನ ಭದ್ರತಾ ಸಿಬ್ಬಂದಿ, ಕಚೇರಿ ನಿರ್ವಹಣಾ ಅಧಿಕಾರಿಗಳು, ಇತ್ಯಾದಿ ಬಹುತೇಕ ಉದ್ಯೋಗಗಳಿಗೆ ಕನ್ನಡೇತರರನ್ನು ನೇಮಿಸಿಕೊಂಡು, ಕನ್ನಡಿಗರಿಗೆ ಅನ್ಯಾಯ ಮಾಡಲಾಗಿತ್ತು. ಇಂತಹ ಕನ್ನಡ ವಿರೋಧಿ ಧೋರಣೆಯಿರುವ ಮೆಟ್ರೋ ಸಂಸ್ಥೆಯ ವಿರುದ್ಧ ಧ್ವನಿಯೆತ್ತಿ, ಮೆಟ್ರೋದಲ್ಲಿ ಎಲ್ಲಾ ವಿಭಾಗಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ಮನವಿಪತ್ರದಲ್ಲಿ ಪ್ರಸ್ತಾಪಿಸಿದ್ದ ಕೆಲವೊಂದು ವಿಷಯಗಳಿಗೆ ಬಿ.ಎಂ.ಆರ್.ಸಿ.ಎಲ್. ಕಂಪನಿ ಪ್ರತಿಕ್ರಿಯೆ ನೀಡಿದೆ. ಪ್ರತಿಕ್ರಯಿಸುತ್ತಾ, ಉದ್ಯೋಗದ ವಿಚಾರದಲ್ಲಿ ಕನ್ನಡಿಗರಿಗೇ ಆದ್ಯತೆ ನೀಡುವುದಾಗಿ, ಮತ್ತು ಕನ್ನಡ ಬಾರದ ಎಲ್ಲ ಉದ್ಯೋಗಿಗಳಿಗೂ ಕನ್ನಡದಲ್ಲಿ ಓದು ಬರೆಯಲು ಮತ್ತು ಮಾತನಾಡಲು ಕಲಿಸುವುದಾಗಿ ತಿಳಿಸಿದೆ. ಇದು ಕೇವಲ ಆಶ್ವಾಸನೆಯಾಗದೆ ನಿಜವಾಗಿಯೂ ಜಾರಿಗೊಳ್ಳುವಂತಾಗಲು ಒತ್ತಾಯ ತರುವುದು ನಮ್ಮೆಲ್ಲರ ಮುಂದಿನ ಜವಾಬ್ದಾರಿಯಾಗಿದೆ.

ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದ ಸಂಸ್ಥೆಗಳ ವಿರುದ್ಧ ಜನಜಾಗೃತಿಗೆ ಆದ್ಯತೆ ನೀಡಲಾಗುವುದು ಮತ್ತು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ನಮ್ಮ ಹೋರಾಟಗಳನ್ನು ನಿರಂತರವಾಗಿ ಮುಂದುವರೆಸಲಾಗುವುದು.
ಕನ್ನಡಿಗರ ಉದ್ಯೋಗ ಮತ್ತು ಉದ್ದಿಮೆ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: