Monday, August 3, 2009

ತಿರುವಳ್ಳುವರ್ ಪ್ರತಿಮೆ ಅನಾವರಣದ ಬಗ್ಗೆ ಕ.ರ.ವೇ. ನಿಲುವು

ಹಿಂದಿನಿಂದಲೂ ಕನ್ನಡಿಗರಿಗೆ ತಮಿಳುನಾಡಿನಿಂದ ಅನ್ಯಾಯವಾಗುತ್ತ ಬಂದಿದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇಂದ್ರ ಸರಕಾರವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮತ್ತು ತನ್ನ ಮೂಗಿನ ನೇರಕ್ಕೆ ನಿರ್ಣಯಗಳನ್ನು ತಗೆದುಕೊಳ್ಳುವ ತಮಿಳುನಾಡು, ಸೌಹಾರ್ದತೆ ಅನ್ನೋ ಪದಕ್ಕೆ ಅರ್ಥ ಗೊತ್ತಿಲ್ಲ ಅನ್ನುವಂತೆ ನಡೆದುಕೊಂಡಿದೆ ಮತ್ತು ಇಂದಿಗೂ ನಡೆದುಕೊಳ್ಳುತ್ತಿದೆ.

ಆದರೆ ಇದನೆಲ್ಲ ನಮ್ಮ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ. ಕೇವಲ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡಿನಮಧ್ಯೆ ಇರುವ ಎಲ್ಲ ಸಂಕಷ್ಟಗಳಿಗೆ ಪರಿಹಾರ ಸಿಗುವುದೆಂದು ಭಾವಿಸಿದಂತೆ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೇ ಆಗಿರುವ ಅನ್ಯಾಯಗಳ ಪಟ್ಟಿ ನೋಡುತ್ತಾ ಹೋದರೆ ಸರಕಾರ ಎಲ್ಲ ಕನ್ನಡಿಗರ
ಸ್ವಾಭಿಮಾನವನ್ನ ತಮಿಳುನಾಡು ಸರಕಾರಕ್ಕೆ ಒತ್ತೆ ಇಟ್ಟಂತೆ ಅನಿಸುತ್ತಿದೆ.

ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಿರುವ ಕೆಲವು ಅನ್ಯಾಯಗಳು ಹೀಗಿವೆ:


೧. ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿನಿಂದ ಆಗುತ್ತಿರುವ ಅನ್ಯಾಯ.

೨. ಹೊಗೇನಕಲ್ ಪ್ರದೇಶವು ಕರ್ನಾಟಕಕ್ಕೆ ಸೇರಿದ್ದರಾದರೂ ಸಹ, ತಮಿಳುನಾಡ ತನ್ನದೆಂದು ಮೊಂಡುವಾದ ಮಾಡುತ್ತಿದೆ. ಕೇಂದ್ರ ಸರಕಾರವು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಗಡಿ ಸಮೀಕ್ಷೆ ಮಾಡಬೇಕೆಂದು ಕರ್ನಾಟಕ ಒತ್ತಾಯಿಸುತ್ತಿದ್ದರು, ತಮಿಳುನಾಡು ಇದಕ್ಕೆ ಸೊಪ್ಪು ಹಾಕುತ್ತಿಲ್ಲ.

೩. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗುವ ಎಲ್ಲಾ ಅರ್ಹತೆ ಇದ್ದರು ಸಹ ತಮಿಳುನಾಡಿನ ಆರ್. ಗಾಂಧಿ ಎನ್ನುವ ವ್ಯಕ್ತಿ ಮದ್ರಾಸ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿ ಕನ್ನಡಕ್ಕೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳು ಸಿಗದಂತೆ ಮಾಡಿದ್ದಾರೆ. ಸೌಹಾರ್ದತೆಯ ಬಗ್ಗೆ ಮಾತನಾಡುವ ತಮಿಳುನಾಡು ಎರೆಡು ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ಅರ್ಜಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಬಹುದಾಗಿತ್ತು. ಆದರೆ ತಮಿಳುನಾಡು ಇದರೆ ಬಗ್ಗೆ ಯಾಕೋ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ.

೪. ಆಲೋಚನೆ ಇಲ್ಲದ ಕನ್ನಡಿಗ ಸಂಸದರ ಬಲಹೀನತೆಯನ್ನ ಉಪಯೋಗಿಸಿಕೊಂಡ ತಮಿಳುನಾಡು, ಕರ್ನಾಟಕಕ್ಕೆ ಬರಬೇಕಾಗಿದ್ದ ಅನೇಕ ಯೋಜನೆಗಳನ್ನು ಕೇಂದ್ರದ ಮೇಲೆ ಒತ್ತಡ ತಂದು ತನ್ನ ಮಡಿಲಿಗೆ ಹಾಕಿಕೊಂಡಿದೆ.

ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ, ಇಷ್ಟೆಲ್ಲ ಅನ್ಯಾಯ ಮಾಡಿದ್ದರು ತಿರುವಳ್ಳುವರ್ ಪ್ರತಿಮೆಯನ್ನು ಯಾವುದೇ ಕಾರಣಕ್ಕು ಅನಾವರಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿರುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ಕನ್ನಡಿಗರ
ಧಿಕ್ಕಾರವಿದೆ.

ಇದರ ಸಂಪೂರ್ಣ ವಿವರವನ್ನು ಇಲ್ಲಿ ಓದಿ.--