Tuesday, August 11, 2009

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ : ಕರ್ನಾಟಕ ರಕ್ಷಣಾ ವೇದಿಕೆಯ ನಿಲುವುಗಳು

ಜಾತಿ ಭಾಷೆ ಪಂಥಗಳನ್ನು ಮೀರಿದ ಹಲವಾರು ದಾರ್ಶನಿಕರು ಹಿಂದೆ ಆಗಿಹೋಗಿದ್ದಾರೆ. ಇವರುಗಳಲ್ಲೊಬ್ಬರು ತಿರುಕ್ಕುರುಳ್ ಬರೆದ ತಮಿಳು ಕವಿ ತಿರುವಳ್ಳುವರ್. ಇವರ ಬಗ್ಗೆ ನಾಡಿನ ಯಾವುದೇ ದಾರ್ಶನಿಕರ ಬಗ್ಗೆ ಇರುವಂತಹುದೇ ಗೌರವ ನಮಗಿದೆ. ಬೆಂಗಳೂರಿನ ಹಲಸೂರಿನಲ್ಲಿ ತಮಿಳಿನ ಸಂತ ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವ ವಿಧಾನ ಮತ್ತು ಸಂದರ್ಭಗಳ ಬಗ್ಗೆ ನಮ್ಮ ವಿರೋಧವಿದೆ.

ಈ ಹಿಂದೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದವರು ಇವರು. ಅಂದು ರಾತ್ರೋರಾತ್ರಿ ಈ ಪ್ರತಿಮೆಯನ್ನು ಅನುಮತಿಯಿಲ್ಲದೆ ನಿಲ್ಲಿಸಿ ಅದನ್ನು ಬೆಂಗಳೂರಿನ ಮೇಲೆ ಹಕ್ಕು ಸ್ಥಾಪಿಸುವ ಪ್ರತೀಕವಾಗಿ ಬಳಸಲು ಮುಂದಾಗಿದ್ದವರು ಇವರು. ಡಾ.ರಾಜ್‍ಕುಮಾರ್ ಅವರ ಅಪಹರಣದ ಸಮಯದಲ್ಲಿ ಈ ಪ್ರತಿಮೆಯ ಅನಾವರಣದ ಬೇಡಿಕೆಯ ಜೊತೆಗೆ ತಮಿಳನ್ನು ಕರ್ನಾಟಕದ ಎರಡನೇ ಆಡಳಿತ ಭಾಷೆಯನ್ನಾಗಿ ಮಾಡಿ ಎಂದಿದ್ದದ್ದನ್ನು ಮರೆಯಲಾದೀತೆ? ಈ ಪ್ರತಿಮೆ ಸಂತ ತಿರುವಳ್ಳುವರ್ ಅವರ ಮಹಾನತೆಗೆ ಪ್ರತೀಕವಾಗದೆ, ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವಕ್ಕೆ ಕೊಳ್ಳಿ ಇಡಲು ಮುಂದಾಗಿರುವ ತಮಿಳರ ಆಕ್ರಮಣಕಾರಿ ಮನಸ್ಥಿತಿಯ ಪ್ರತೀಕವಾಗಿದೆ. ಹಾಗಾಗಿ ಇದನ್ನು ನಾಡಿನ ಕನ್ನಡಿಗರು ಸೌಹಾರ್ದತೆಯ ಕ್ರಮವೆಂದು ಪರಿಗಣಿಸಿಲ್ಲ ಮತ್ತು ಈ ಕಾರಣಕ್ಕಾಗಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸುತ್ತೇವೆ.

ಈ ಪ್ರತಿಮೆಯ ಸ್ಥಾಪನೆ ಸಾಂಸ್ಕೃತಿಕ ವಿನಿಮಯವೂ ಅಲ್ಲ, ಸೌಹಾರ್ದತೆಗೆ ಪೂರಕವೂ ಅಲ್ಲ. ಏಕೆಂದರೆ ಪ್ರತಿಮೆಗಳನ್ನು ಕನ್ನಡಿಗರು ತಾವಾಗಿಯೇ ಇಲ್ಲಿ ಸ್ಥಾಪಿಸಲು ಮುಂದಾಗಿಲ್ಲ, ಅಥವಾ ತಮಿಳುನಾಡು ಸರ್ವಜ್ಞ ಮೂರ್ತಿಯನ್ನು ಸರ್ವಜ್ಞನ ಅಥವಾ ಕನ್ನಡಿಗರ ಬಗ್ಗೆ ಇರುವ ಪ್ರೀತಿಯಿಂದ ಪ್ರತಿಷ್ಠಾಪನೆ ಮಾಡುತ್ತಿರುವರೇನು? ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು "ಕನ್ನಡನಾಡಿನ ಮುಖ್ಯವಾಹಿನಿಯಿಂದ ಇಲ್ಲಿ ವಾಸಿಸುವ ತಮಿಳರು ಹೊರಗೇ" ಎಂಬುದಾಗಿ ಸಾರಲು ಪ್ರತಿಷ್ಠಾಪಿಸಲಾಗುತ್ತಿದೆ ಎಂಬುದರ ಬಗ್ಗೆ ನಾಡ ಜನಕ್ಕೆ ಅನುಮಾನವಿಲ್ಲ. ಆ ಕಾರಣದಿಂದಾಗಿ ಪ್ರತಿಮೆಯ ಸ್ಥಾಪನೆಗೆ ನಮ್ಮ ವಿರೋಧವಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಹೊಸ್ತಿಲಲ್ಲಿ ಇಲ್ಲಿರುವ ತಮಿಳರ ಮತಗಳನ್ನು ಗಳಿಸುವ ದುರುದ್ದೇಶದಿಂದ ನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ರಾಜ್ಯ ಸರ್ಕಾರದ ಈ ಕ್ರಮದಿಂದ ಕನ್ನಡಿಗರ ಸ್ವಾಭಿಮಾನವನ್ನು ತಮಿಳರ ಕಾಲಡಿಯಲ್ಲಿಡಲು ಮುಂದಾಗಿರುವುದರ ಬಗ್ಗೆ ವಿರೋಧ. ಯಾವ ರಾಜ್ಯದವರು ನಮ್ಮ ನೆಲವಾದ ಹೊಗೇನಕಲ್‍ನಲ್ಲಿ ಅಕ್ರಮ ಕಾಮಗಾರಿಗೆ ಮುಂದಾಗಿದ್ದು, ಕನ್ನಡಿಗರ ಸೌಹಾರ್ದಯುತವೂ ನ್ಯಾಯಯುತವೂ ಆದ ಜಂಟಿ ಸಮೀಕ್ಷೆಯ ಬೇಡಿಕೆಗೆ ಕಿಂಚಿತ್ತೂ ಬೆಲೆಕೊಡದೇ ಇರುವರೋ, ಯಾವ ರಾಜ್ಯದವರು ಕಾರಣವಿಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಕೇಂದ್ರದ ಘೋಷಣೆಗೆ ಕಂಟಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬ ಕತ್ತಿ ಛಳಪಿಸುತ್ತಿರುವರೋ, ಯಾವ ರಾಜ್ಯದ ಜೊತೆಗೆ ನಮಗಿನ್ನೂ ಬಗೆಹರಿಯದ ಹತ್ತಾರು ಸಮಸ್ಯೆಗಳಿವೆಯೋ ಆ ರಾಜ್ಯದ ಜೊತೆಗೆ ಪ್ರತಿಮೆಗಳ ಅನಾವರಣದಿಂದ ಸೌಹಾರ್ದತೆ ಹೆಚ್ಚುವುದು ಎಂಬುದನ್ನು ನಂಬಲಾದೀತೆ? ಒಕ್ಕೂಟ ವ್ಯವಸ್ಥೆಯಲ್ಲಿ ನಮಗಿನ್ನೂ ಸಿಗಬೇಕಾದ ಸಮಾನ ಗೌರವ ಸಿಗುತ್ತಿಲ್ಲ ಎಂಬುದಕ್ಕೆ ಪುರಾವೆಯಾಗಿ ಈ ಪ್ರತಿಮೆಗಳು ಅನಾವರಣಗೊಳ್ಳುತ್ತಿರುವ ಸ್ಥಳಗಳು, ಕಾರ್ಯಕ್ರಮದ ಅದ್ದೂರಿತನದಲ್ಲಿರೋ ತಾರತಮ್ಯ, ಅನಾವರಣದ ದಿನಾಂಕಗಳಲ್ಲಿರೋ ತಾರತಮ್ಯ... ಇವೆಲ್ಲವುಗಳೂ ಈ ಪ್ರತಿಮೆಯ ಅನಾವರಣವೆನ್ನುವುದು ಕನ್ನಡಿಗರ ಸ್ವಾಭಿಮಾನವನ್ನು ಬಲಿಕೊಡುತ್ತಿರುವ ಕ್ರಮವೆಂದು ನೋವಿನಿಂದ ನುಡಿಯಬೇಕಾಗಿದೆ. ಈ ಕಾರಣದಿಂದ ನಾವು ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸುತ್ತೇವೆ.

ಈ ನಮ್ಮ ಸ್ವಾಭಿಮಾನದ ಕೂಗನ್ನು ಹತ್ತಿಕ್ಕಲು ರಾಜ್ಯಸರ್ಕಾರವು ಎಲ್ಲಾ ರೀತಿಯಲ್ಲೂ ಬಲಪ್ರಯೋಗಕ್ಕೆ ಮುಂದಾಗಿದೆ. ನಮ್ಮ ಪ್ರತಿಭಟನೆಯ ಹಕ್ಕನ್ನು ಮೊಟಕು ಮಾಡಲು ಇಡೀ ಪೊಲೀಸ್ ಬಲವನ್ನು ನಿರ್ದಾಕ್ಷಿಣ್ಯವಾಗಿ ಬಳಸಲಾಗುತ್ತಿದೆ. ಇದ್ಯಾವುದೂ ನಮ್ಮ ನಾಡಪರವಾದ ನಿಲುವನ್ನು ಕದಲಿಸಲಾರವು. ಕನ್ನಡಿಗರೆಲ್ಲಾ ನಮ್ಮ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕೆಂದೂ, ರಾಜ್ಯಸರ್ಕಾರದ ದಬ್ಬಾಳಿಕೆಯ ದೌರ್ಜನ್ಯದ ಕ್ರಮಗಳನ್ನು ಖಂಡೀಸಬೇಕೆಂದೂ ಈ ಮೂಲಕ ಕೋರುತ್ತೇವೆ.